ಅಳಲೆ ಮರ -
ಕಾಂಬ್ರಿಟೇಸೀ ಕುಟುಂಬಕ್ಕೆ ಸೇರಿದ ಔಷಧೀಯ ಮಹತ್ತ್ವದ ಮರ. ತಾರೆಮರ ಮತ್ತಿಮರ, ಕಾಡುಬಾದಾಮಿ ಮರಗಳಿಗೆ ಹತ್ತಿರದ ಸಂಬಂಧಿ. ಸಸ್ಯವೈಜ್ಞಾನಿಕ ಹೆಸರು ಟರ್ಮಿನೇಲಿಯ ಚಬುಲ. ಇದು 25-40 ಮೀಟರ್ ಎತ್ತರ ಬೆಳೆಯುತ್ತದೆ. ರೆಂಬೆ, ಎಲೆ, ಮೊಗ್ಗುಗಳು ಎಳೆಯುವಾಗಿರುವಾಗ ಅವುಗಳ ಮೇಲೆ ಕೂದಲುಗಳು ಬೆಳೆದುಕೊಂಡು ಹೊಳೆಯುತ್ತಿರುತ್ತವೆ. ಈ ಮರದ ಹೂಗೊಂಚಲಿನಲ್ಲಿ ತೊಟ್ಟಿಲ್ಲದ ಅನೇಕ ದ್ವಿಲಿಂಗ ಪುಷ್ಪಗಳಿರುತ್ತವೆ. ಅವು ಬಲಿತಮೇಲೆ ಕೂದಲುಗಳು ಉದುರಿ ಹೋಗುತ್ತವೆ. ಇಂಥ ಹೂಗೊಂಚಲಿಗೆ ಸ್ಪೈಕ್ ಅಥವಾ ತೆನೆ ಎಂದು ಹೆಸರು. ಇದು ಬಿಸಿಲಿನಾಸರೆಯ ಮರ. ದೀರ್ಘ ಶುಷ್ಕತೆಯನ್ನೂ ಹಿಮಶೈತ್ಯವನ್ನೂ ಸಹಿಸಬಲ್ಲದು. ಬೆಂಕಿಗೆ ಅಷ್ಟು ಜಾಗ್ರತೆ ಈಡಾಗುವುದಿಲ್ಲ. ಕತ್ತರಿಸಿದ ಮರದಿಂದ ಚಿಗುರು ಚೆನ್ನಾಗಿ ಒಡೆಯುವುದು.

	ಒಣಗಿದ ಹಣ್ಣು ಜೀರ್ಣೋತ್ತೇಜಕ, ಜಲವರ್ಧಕ, ವಾತಹಾರಿ ಮತ್ತು ಕಫಾಹಾರಿ, ಆಮಶಂಕೆ, ಉಬ್ಬಸ, ಕೆಮ್ಮು, ದಮ್ಮು, ಗಂಟಲು ಉರಿ, ದಾಹ, ವಾಂತಿ, ಬಿಕ್ಕಳಿಕೆ, ಹೃದಯಬೇನೆ, ಕಣ್ಣುಬೇನೆ, ಉರಿಮೂತ್ರ, ಪಿತ್ತ ಕೆರಳುವಿಕೆ, ಬಾವು, ರಕ್ತಸೋರುವ ಮೂಲವ್ಯಾಧಿ, ಸನ್ನಿಪಾತ, ತೊನ್ನು, ಕಜ್ಜಿ, ಕಷ್ಟಶ್ವಾಸ, ಮಲಬದ್ಧತೆ, ರಕ್ತಹೀನತೆ, ಚಿತ್ತಭ್ರಮೆ, ಉನ್ಮಾದ ಮೊದಲಾದ ರೋಗಗಳಿಗೆ ಔಷಧಿ ತಯಾರಿಸಲು ಇದನ್ನು ಉಪಯೋಗಿಸುತ್ತಾರೆ.

	ಅಳಲೆಕಾಯಿಯನ್ನು ಮಾಗುವ ಮೊದಲು ತಿಂದರೆ ಮಲಕಟ್ಟುತ್ತದೆ. ಇದನ್ನು ಆಮಶಂಕೆ, ಅತಿಸ್ರಾವಕ್ಕೆ ಉಪಯೋಗಿಸಬಹುದು. ಹಣ್ಣನ್ನು ತಿಂದರೆ ಭೇದಿಯಾಗುತ್ತದೆ. ಇದು ಶಕ್ತಿವರ್ಧಕ ಮತ್ತು ವಾತಹಾರಿ. ಗುಲ್ಮ (ಪ್ಲೀಹ) ರೋಗಗಳನ್ನೂ ಗುಣಪಡಿಸುತ್ತದೆ. ಜ್ಞಾಪಕಶಕ್ತಿಯನ್ನೂ ಹೆಚ್ಚಿಸುತ್ತದೆ. ಒಣಗಿದ ಹಣ್ಣನ್ನು ಚೆನ್ನಾಗಿ ನುಣುಪಾಗಿ ಪುಡಿಮಾಡಿ ಚೂರ್ಣವಾಗಿ ಉಪಯೋಗಿಸುತ್ತಾರೆ. ಹಲ್ಲುಗಳಲ್ಲಿನ ರಕ್ತಸ್ರಾವಕ್ಕೂ ವಸಡುಗಳ ಗಾಯಕ್ಕೂ ಇದು ಗುಣಕಾರಿಯಾಗಿದೆ. 

	ಹಣ್ಣನ್ನು ಒರಟಾಗಿ ಪುಡಿಮಾಡಿ ಹೊಗೆಬತ್ತಿ ಮಾಡಿ ಸೇದುವುದರಿಂದ ಅಸ್ತಮ ಕೆಮ್ಮು ಕಡಿಮೆಯಾಗುತ್ತದೆ. ಹಣ್ಣಿನ ಕಷಾಯದಿಂದ ಗಾಯ ತೊಳೆದರೆ ರಕ್ತಸ್ರಾವ ನಿಲ್ಲುತ್ತದೆ. ಕಲ್ಲಿನ ಮೇಲೆ ಹಣ್ಣನ್ನು ತೇದು ಗಂಧವನ್ನು ಸುಟ್ಟಗಾಯ, ಹೊಪ್ಪಳೆಗೆ ಹಚ್ಚಿದರೆ ಗುಣವಾಗುತ್ತದೆ. ಒಂದು ರಾತ್ರಿ ಹಣ್ಣನ್ನು ನೆನೆಹಾಕಿ ಆ ನೀರಿನಿಂದ ಕಣ್ಣುತೊಳೆದರೆ ಕಣ್ಣುಗಳಿಗೆ ತಂಪಾಗುತ್ತವೆ. ಜಜ್ಜಿದ ಗಾಯ, ಉರಿಯುವ ಕುರು, ಹುಣ್ಣು ಮೊದಲಾದವುಗಳಿಗೆ ಹಣ್ಣನ್ನು ಪುಡಿಮಾಡಿ ಬೆಣ್ಣೆಯೊಡನೆ ಬೆರೆಸಿ ಹಚ್ಚಿದರೆ ಜಾಗ್ರತೆ ಗುಣವಾಗುತ್ತದೆ. ಅಳಲೆ ಮರದ ತೊಗಟೆಯನ್ನು ಸೇವಿಸಿದರೆ ಹೃದಯ ಶಕ್ತಿ ಹೆಚ್ಚುತ್ತದೆ ಮತ್ತು ಮೂತ್ರಸ್ರಾವವನ್ನು ಅಧಿಕಗೊಳಿಸುತ್ತದೆ.									    		
 (ಎಚ್.ಎನ್.ಸಿ.; ಎ.ಕೆ.ಎಸ್.)
									      (ಪರಿಷ್ಕರಣೆ : ಕೆ ಬಿ ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ